Saturday, October 24, 2009

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)

ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !

ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.

ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!

ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ ಆಗಿರುವವರು, ಮದುವೆ ಮಹೂರ್ತ ಫಿಕ್ಸ್ ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.

ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.

ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.

ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ. ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!

ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .

ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!

Thursday, October 15, 2009

ನೂರುಸಾವಿರ ಸಾವಿನ ನೆನಪು !

ಇತಿಹಾಸ ಭೀಕರ. ಅಧಿಕಾರ, ಆಸೆ ಯುದ್ಧಕ್ಕೆ ದಾರಿಮಾಡಕೊಡಬಹುದು. ಅನ್ಯಾಯ, ಸೇಡು ದ್ವೇಷಕ್ಕೆ, ಜೊತೆಗೆ ಎಂತಹ ಕ್ರೌರ್ಯಕ್ಕೂ ಕಾರಣವಾಗಬಲ್ಲುದು.

"ಎಲ್ಲರೂ ನಿಂತು ನೋಡುತ್ತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಾರೂ ಹಿಟ್ಲರನ ವಿರುದ್ಧ ದಂಗೆಯೇಳಲಿಲ್ಲ" ಎನ್ನುತ್ತಾಳೆ ಜರ್ಮನಿಯಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದ ಯಹೂದಿ ಹ್ಯಾನಾ. ಅವತ್ತು ಹಿಟ್ಲರ ಯಹೂದಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಾಗ ಜರ್ಮನರು ಅದನ್ನು ವಿರೋಧಿಸಲಿಲ್ಲವಾ, ಎಲ್ಲರಿಗೂ ಅವ ಮಾಡುತ್ತಿರುವುದು ಸರಿಯೆಂದೇ ಅನ್ನಿಸಿಬಿಟ್ಟಿತ್ತಾ? ಆ ಮಟ್ಟಿಗೆ ರೋಸಿಹೋಗಿದ್ದರಾ? ಅಥವಾ ಹೆದರಿ ಸುಮ್ಮನಾಗಿದ್ದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಹಿಟ್ಲರ್ ಗೆ ಬೆಂಬಲವಿತ್ತು. ಹಿಟ್ಲರನಿಂದ ತಪ್ಪಿಸಿಕೊಂಡು ಓಡಿದ ಹಲವು ಯಹೂದಿಯರು ಜಗತ್ತಿನ ಹಲವು ದೇಶಗಳಲ್ಲಿ ಆಶ್ರಯ ಪಡೆದರು. ಭಾರತದಲ್ಲೂ ಕೂಡ, ಬೆಂಗಳೂರಿನಲ್ಲೂ ಕೂಡ. ಸಿ.ವಿ.ರಾಮನ್ ರವರು ಯಹೂದಿ ವಿಜ್ಞಾನಿಗಳನ್ನು ಇಲ್ಲಿನ I.I.Sc. ಗೆ ಆಹ್ವಾನಿಸಿದ್ದರು. ತನ್ನ ಮಗಳ ಜೊತೆ ವಿಜ್ಞಾನಿಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಆ ಯಹೂದಿ ಹುಡುಗಿಯ fiction ಕಥೆಯೇ ’ಯಾದ್ ವಶೇಮ್’.


'ಯಾದ್ ವಶೇಮ್' ಕಥೆ ಶುರುವಾಗುವುದು ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸ್ಮಶಾನದಿಂದ. ಜರ್ಮನಿಯಿಂದ ತಂದೆಯೊಂದಿಗೆ ಬಂದ ಹ್ಯಾನಾ ಇಲ್ಲಿನವಳೇ ಆಗಿಹೋಗುತ್ತಾಳೆ. ತನಗೆ ಆಶ್ರಯ ನೀಡಿದ ಕುಟುಂಬದ ಹಿಂದು ಹುಡುಗನನ್ನು ಮದುವೆಯಾಗುತ್ತಾಳೆ. ಜನಾಂಗ ದ್ವೇಷಕ್ಕೆ ಬಲಿಯಾಗಿ ಬದುಕು ಕಳೆದುಕೊಂಡು ಬಂದ ಅವಳು ಭಾರತ ದೇಶದಲ್ಲಿ ಎಷ್ಟೊಂದು ವೈರುಧ್ಯಗಳ ನಡುವೆ ಎಲ್ಲರೂ ಅವರವರಾಗಿಯೇ ಉಳಿಯಲು ಸಾಧ್ಯವಿರುವ ವಾತಾವರಣದ ಬಗ್ಗೆ ಹೆಮ್ಮೆ ಪಡುತ್ತಾಳೆ. "ತಾನು ತಾನಾಗಿ, ಅವರು ಅವರಾಗಿಯೂ, ನಾವು ಒಂದಾಗಬಹುದಾದ ಧರ್ಮ ನಿರಪೇಕ್ಷ ನಾಡು ಈ ಭಾರತ" ಎಂಬ ಸತ್ಯ ಎಲ್ಲೆಲ್ಲೂ ಕಾಣುತ್ತದೆ ಅವಳಿಗೆ.

ಜರ್ಮನಿ ಬಿಟ್ಟು ಬರುವ ಸಮಯದಲ್ಲಿ ಅನಿವಾರ್ಯವಾಗಿ ಅಗಲಿದ ತನ್ನ ತಾಯಿ,ತಂಗಿ,ತಮ್ಮಂದಿರನ್ನು ದಶಕಗಳ ಅನಂತರ ಹ್ಯಾನಾ ಹುಡುಕಿಕೊಂಡು ಹೋಗುತ್ತಾಳೆ. ಅವರು ಏನಾದರು ಎಂಬ ಕತೆಯು ಜರ್ಮನಿ, ಹಿಟ್ಲರ್, ಯಹೂದಿಗಳ ವಿರುದ್ಧ ಅವನ ಅಂತಿಮ ಪರಿಹಾರ, ಅಮೆರಿಕಾ ಎಲ್ಲಾ ಕಡೆ ಸುತ್ತಿಸಿಕೊಂಡು ಬರುತ್ತದೆ. ನಾಜಿ ಕ್ಯಾಂಪಿನ ಆ ಕ್ರೌರ್ಯ ಮನುಷ್ಯನಾದ ಯಾರನ್ನೇ ಆದರೂ ಬೆಚ್ಚಿ ಬೀಳಿಸದಿರಲು ಸಾಧ್ಯವಿಲ್ಲವೇ ಇಲ್ಲ. ಹಿಟ್ಲರನ ದ್ವೇಷಕ್ಕೆ ಸಿಕ್ಕ ಯಹೂದಿಗಳು ಕಸಾಯಿಖಾನೆಯ ಪ್ರಾಣಿಗಳಂತಾದರು. ಪ್ರಯೋಗಗಳಿಗೆ ವಸ್ತುಗಳಾದರು. ೬೦ ಲಕ್ಷ ಜನ ಎಲ್ಲಾ ತರಹದ ಹಿಂಸೆಗಳಿಗೆ ಬಲಿಯಾಗಿ ಗ್ಯಾಸ್ ಛೇಂಬರಿನಲ್ಲಿ ಒದ್ದಾಡಿ ಒಲೆಗಳಲ್ಲಿ ಕಟ್ಟಿಗೆಗಳಾಗಿ ಉರಿದುಹೋದರು. ಅನಂತರ ಯಹೂದಿಯರಿಗಾಗಿಯೇ ಇಸ್ರೇಲ್ ದೇಶ ಹುಟ್ಟಿಕೊಂಡಿತು. ಹುಡುಕಾಟದ ಕೊನೆಯಲ್ಲಿ ಹ್ಯಾನಾ ಇಸ್ರೇಲ್ ತಲುಪುತ್ತಾಳೆ. ಹೊರದಬ್ಬಿಸಿಕೊಂಡ ಯಹೂದಿ ಜನ ತಮ್ಮದೇ ಆದ ಭೂಮಿಗೆ ಕಾದಿದ್ದರು, ಪಡೆದುಕೊಂಡರು ನಿಜ. ಆದರೆ ಇಲ್ಲಿ ಅವರು ಮಾಡಿದ್ದಾದರೂ ಏನು? ಯಾವ ಜನ ತಮಗಾದ ಅನ್ಯಾಯ, ದ್ವೇಷ, ಹಿಂಸೆ ಬೇರೆಯವರಿಗಾಗಬಾರದೆಂದು ಆಶಿಸಬೇಕಿತ್ತೋ ಅವರೇ ಪ್ಯಾಲಿಸ್ಟೇನಿ ಅರಬ್ಬರ ಭೂಮಿಯನ್ನು ಕಸಿದುಕೊಂಡರು. ವಿರೋಧಿಸಿದವರು ಉಗ್ರರಾದರು, ಹೊಸಕಿ ಹಾಕಲ್ಪಟ್ಟರು. ಇಸ್ರೇಲಿಗಳು ಇದು ತಮ್ಮ ಸ್ವಾತಂತ್ರ್ಯ ಹೋರಾಟವೆಂದರು, ಇದು ತಮಗೆ ದೇವರು ಕೊಟ್ಟ ಹಕ್ಕಿನ ಭೂಮಿ ಎಂದರು. ಇವತ್ತಿಗೂ ಅಲ್ಲಿ ಹಿಂಸೆ ನಿಂತಿಲ್ಲ. ನೆಮ್ಮದಿಯ ಬಾಳು ಯಾರಿಗೂ ಇಲ್ಲ. "ನಮ್ಮ ಬದುಕುವ ಹಕ್ಕು ಇನ್ನೊಬ್ಬರ ಸಾವಿನ ಮೇಲೆ ನಿಲ್ಲಬೇಕಾ?" ಎನ್ನುತ್ತಾಳೆ ಹ್ಯಾನಾ.

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ,ಅವರು ಹೇಳಿದ್ದೇ ಇತಿಹಾಸವಾಗುತ್ತದೆ". ಜರ್ಮನಿಯಲ್ಲಿ ನಾಜೀ ಕ್ರೌರ್ಯ ನೆಡೆದೇ ಇಲ್ಲವೆಂಬಂತೆ ಇತಿಹಾಸವನ್ನು ಗುಡಿಸುವ ಪ್ರಯತ್ನ. ಜರ್ಮನಿಯ ಹೊಲೋಕಾಸ್ಟಿನ ಮ್ಯೂಸಿಯಮ್ಮನ್ನು ವಾಷಿಂಗ್ಟನ್ನಿನಲ್ಲಿಟ್ಟು ನಾಜಿ ಕ್ರೌರ್ಯದ ವಿರುದ್ಧ ಫೋಸು ಕೊಡುವ ಅಮೆರಿಕಾ ತಾನು ಕೊಂದು ಹಾಕಿದ ಲಕ್ಷ ಲಕ್ಷ ರೆಡ್ ಇಂಡಿಯನ್ನರ ಬಗ್ಗೆ, ಅಣುಬಾಂಬಿನಲ್ಲಿ ಬೆಂದುಹೋದ ಜಪಾನೀಯರ ಬಗ್ಗೆ ಪಿಟಿಕ್ಕೆನ್ನುವುದಿಲ್ಲ. ಇರಾಕಿನಲ್ಲಿ, ಅಫ್ಘ್ಹಾನಿಸ್ತಾನದಲ್ಲಿ, ಕ್ಯೂಬಾದಲ್ಲಿ ತನ್ನ ಅನಾಚಾರಗಳ ಬಗ್ಗೆ ಸಾಕ್ಷಿಗಳನ್ನು ಉಳಿಸುವುದಿಲ್ಲ.


ಹಳೇ ಬೆಂಗಳೂರಿನ ಚಿತ್ರಣ, ಬ್ರಿಟಿಷ್ ಆಡಳಿತದಲ್ಲಿ ವಿಶ್ವಯುದ್ಧದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕಾದ ಭಾರತ, ಹೆಚ್.ಎ.ಎಲ್ ವಿಮಾನ ಕಾರ್ಖಾನೆ ಸ್ಥಾಪನೆಯ ಘಟನೆಗಳು, ಯಹೂದಿ ಮತ್ತು ಇಸ್ಲಾಂ ಧರ್ಮಗಳು, ಡಕಾವ್ ನಾಜಿ ಕ್ಯಾಂಪ್, ಹಿಟ್ಲರನ ಆ ದಿನಗಳು, ಅಮೆರಿಕಾದ ನಸುಗುನ್ನಿಯಾಟ, ಮೂರೂ ಧರ್ಮಗಳ ಸಂಧಿ ಜೆರುಸಲೇಂ, ಇವತ್ತಿನ ಇಸ್ರೇಲಿನ ಸ್ಥಿತಿಯ ನಡುವೆಯ ಕತೆ ಚಾಮರಾಜಪೇಟೆಯ ಕೌಟುಂಬಿಕ ವಾತಾವರಣದಲ್ಲೇ ಬಿಚ್ಚಿಕೊಳ್ಳುತ್ತದೆ, ನಡೆಯುತ್ತದೆ. ಎಲ್ಲೆಲ್ಲೂ ಅತಿರೇಕಕ್ಕೆ ಹೋಗದಂತೆ, ಅತ್ಯಂತ ಸಮತೋಲನವಾಗಿ ಹಲವು ಮಾಹಿತಿಗಳ ವಾಸ್ತವದ ನೋಟ ಈ ಪುಸ್ತಕದ ವಿಶೇಷತೆ. ನಿಜವಾದ ವ್ಯಕ್ತಿಗಳು ಹಲವು ಪಾತ್ರಗಳು, ಜೊತೆಗೆ ಪೂರಕ ಚಿತ್ರಗಳು. ಕೊನೆಗೆ ಮುಗಿಸುವಾಗ, "ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಿಬಿಡಬಲ್ಲ, ಜರ್ಮನಿ, ಅಮೆರಿಕಾ, ಭಾರತ, ನಮ್ಮ ನಡುವೆ, ಕೊನೆಗೆ ನಮ್ಮೊಳಗೇ" ಎನ್ನುತ್ತಾರೆ ನೇಮಿಚಂದ್ರ. ಇಲ್ಲ ಅನ್ನಿಸಲು ಸಾಧ್ಯವೇ ಇಲ್ಲ.

ಸಂಬಂಧಪಟ್ಟ ದೇಶ, ಸ್ಥಳಗಳಿಗೆಲ್ಲಾ ಸ್ವತಃ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಇದನ್ನು ಸುಮ್ಮನೇ ಒಂದು ಕಾದಂಬರಿಯಾಗಿಸದೇ ಬಹಳ informative ಆಗಿ ಬರೆದಿದ್ದಾರೆ. ಈ ಪುಸ್ತಕ ನಾನು ಓದಿದ ಅದ್ಭುತ ಪುಸ್ತಕಗಳಲ್ಲೊಂದು.

**********

ಟಿಪ್ಪಣಿ:

ಹಿಟ್ಲರ್ - ಜಗತ್ತು ಎಂದೆಂದಿಗೂ ಮರೆಯಲಾಗದ ಸರ್ವಾಧಿಕಾರಿ. ಹಿಟ್ಲರನ ಬಗ್ಗೆ ಅತಿರಂಜಿತ ಸುದ್ದಿಕತೆಗಳೇನೇ ಇರಲಿ, ಯಹೂದಿಯರ ವಿರುದ್ಧ ಹೊಲೋಕಾಸ್ಟ್ ಎಂಬ ಅಮಾನವೀಯತೆಗೆ ಇಳಿಯದಿದ್ದರೆ ಜಗತ್ತಿನ ಸಮರ್ಥ ನಾಯಕರಲ್ಲೊಬ್ಬ ಎನಿಸಿಕೊಳ್ಳುವ ಅವಕಾಶವಿದ್ದವನು. ನಮಗೆ ಇದುವರೆಗೂ ಹಿಟ್ಲರನ ಬಗ್ಗೆ ಇಂಗ್ಲೀಷ್ ಮಾಧ್ಯಮಗಳು ಅದರಲ್ಲೂ ಅಮೆರಿಕಾದ ಮಾಧ್ಯಮಗಳು ಕೊಟ್ಟಿರುವ ರಾಕ್ಷಸ ಚಿತ್ರಣ ಸಹಜ. ಅವರಿಗಾಗದ್ದವರನ್ನು, ಅವರಿಗೆ ತಲೆಬಾಗದವರನ್ನು, ಅವರ ವಿರುದ್ಧ ನಿಂತವರನ್ನು ದೊಡ್ಡ ಮನುಕುಲ ಕಂಟಕರು ಎಂಬಂತೆ ಚಿತ್ರಿಸಿ ಜಗತ್ತಿಗೆ ಪ್ರಚಾರ ಮಾಡುವುದು ಅಮೆರಿಕಾದ ಮಾಧ್ಯಮಗಳ ಗುಣ. ಅದಕ್ಕೆ ರಷ್ಯಾ, ಕ್ಯೂಬಾ, ಕೊರಿಯಾ, ಚೀನಾ ಉದಾಹರಣೆಗಳು. ಹಿಟ್ಲರನೂ ಕೂಡ ಹೊರತಲ್ಲ. ಇಂತವನಿಗೆ ಅದ್ಯಾಕೆ ಯಹೂದಿಯರ ವಿರುದ್ಧ ಅಂತಹ ದ್ವೇಷವಿತ್ತು ಎಂಬುದು ನಮಗೆ ಕೊಟ್ಟಿರುವ ಚಿತ್ರಣಗಳಿಗಿಂತ ಸ್ವಲ್ಪ ಬೇರೆ. ಅದಕ್ಕೆ ಹಿಟ್ಲರನೇ ಬರೆದಿರುವ 'ಮೈನ್ ಕಾಂಫ್' ಪುಸ್ತಕದಲ್ಲಿ ಉತ್ತರವಿದೆ. ಅದು ಹಿಟ್ಲರ್ ಎಂತಹ ಉತ್ತಮ ರಾಜಕೀಯ ಚಿಂತಕನಾಗಿದ್ದ, ನೋಟ ಹೊಂದಿದ್ದ ಎಂದು ಸ್ಪಷ್ಟಪಡಿಸುತ್ತದೆ. ಜರ್ಮನಿಯಲ್ಲಿ ಪ್ರತಿಯೊಂದರಲ್ಲೂ ಯಹೂದಿಯರ ಹಿಡಿತ ಯಾವ ರೀತಿ ಇತ್ತೆಂದರೆ ಜರ್ಮನ್ನರು ಎರಡನೇ ದರ್ಜೆ ನಾಗರಿಕರಾಗಿ ಹೋಗಿದ್ದರು. ವ್ಯಾಪಾರ, ರಾಜಕೀಯ, ಸಾಮಾಜಿಕ ಜೀವನದಲ್ಲೆಲ್ಲಾ ಯಹೂದಿಗಳದ್ದೇ ಹಿಡಿತ. ಮಾಧ್ಯಮಗಳು ಕೂಡ ಅವರ ಅಂಕೆಯಲ್ಲೇ ಕುಣಿಯುತ್ತಿದ್ದವು. ಅದು ಯಾವ ಮಟ್ಟಕ್ಕಿತ್ತೆಂದರೆ ಜರ್ಮನಿಯ ಮಿಲಿಟರಿಯ ಸೈನಿಕರಿಗೆ ತಾಯ್ನಾಡಲ್ಲೇ ಬೆಂಬಲವಿಲ್ಲದೇ ಹೋರಾಡುವ ಸ್ಥೈರ್ಯ ಇಂಗಿಹೋಗಿತ್ತು. ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ. ಇದರ ವಿರುದ್ಧ ಸಿಡಿದವನೇ ಹಿಟ್ಲರ್. ಇದಕ್ಕೆಲ್ಲಾ ಕೊನೆಹಾಡಿ ಜರ್ಮನ್ನರಾದ ತಮ್ಮದೂ ಕೂಡ ಯಾವ ಯಹೂದಿಗಳಿಗೂ ಕಡಿಮೆಇಲ್ಲದಂತಹ ಶ್ರೇಷ್ಠ ಜನಾಂಗ ಎಂದು ತೋರಿಸಲು, ಸಾಧಿಸಲು ಹೋದವನು ಹಿಟ್ಲರ್. ಆದರೆ ಅದಕ್ಕೆ ಅವನನುಸರಿಸಿದ ಮಾರ್ಗ ಮಾತ್ರ ಕ್ಷಮಿಸಲಾರದ್ದಾಯಿತು. ಇವತ್ತಿಗೂ ಕೂಡ ಜಗತ್ತಿನ ದೊಡ್ಡ ದೊಡ್ಡ ವ್ಯಾಪಾರಗಳಲ್ಲಿ ಯಹೂದಿಯರ ಹಿಡಿತವಿದೆ. ಆದರೆ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ. ಎಲ್ಲರೊಳಗೊಬ್ಬ ಹಿಟ್ಲರ್ ಇದ್ದೇ ಇದ್ದಾನೆ.

****

ಮಾಹಿತಿ ಮೂಲ:
ಪುಸ್ತಕಗಳು : Mein Kampf (Adolf Hitler), Yadvashem (Nemichandra)
Documentary movie: Occupation 101 and some websites

Thursday, October 08, 2009

’ಯಾದ್ ವಶೇಮ್’ ಗುಂಗಿನಲ್ಲಿ....

ಕಾರ್ಪೋರೇಷನ್ ಸರ್ಕಲ್ಲಿನ ಎರಡೆರಡು ಸಿಗ್ನಲ್ಲುಗಳನ್ನು ದಾಟಿಕೊಂಡು ಬನ್ನಪ್ಪ ಗಾರ್ಡನ್ನಿನ ಪಕ್ಕದ ರಸ್ತೆಯಲ್ಲಿ ಕಾವೇರಿಭವನದ ಎದುರಿಗೆ ಬರುತ್ತಿದ್ದ ಹಾಗೇ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಂಪು ಸಿಗ್ನಲ್ಲು. ನಿಲ್ಲಿಸಿದೆ ಬೈಕು. ೧೧೨ ಸೆಕೆಂಡು ಬಾಕಿ!  ಗಾಡಿ ಆಫ್ ಮಾಡಿದೆ. . ಎಡಗಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ. ಅದು ಯಲಹಂಕ ಬಾಗಿಲಂತೆ! ಅದರ ಈಚೆ ಕಡೆ ರಾಜಕುಮಾರ್ ಹೆಬ್ಬಾಗಿಲು, ಆಚೆ ವಿಶ್ವೇಶ್ವರಯ್ಯ ಹೆಬ್ಬಾಗಿಲು ಎಂದು ದೊಡ್ಡದಾಗಿ ಬರೆದಿರುವ ಕಮಾನುಗಳು. ಅದರ ಮೂಲಕ ಅವೆನ್ಯೂ ರಸ್ತೆಗೆ ಪ್ರವೇಶ. ಬಲಬದಿಯಲ್ಲೊಂದು ಟ್ರಾಫಿಕ್ ಪೋಲೀಸ್ ಗೂಡು. ಖಾಲಿ ಇದೆ. ಅಲ್ಲೇ ದೇವರ್ಯಾವುದೆಂದು ಗೊತ್ತಾಗದ ಗುಡಿಯೊಂದಿದೆ. ಮುಂದೆ ಬಿಳಿ ಗೋಡೆಯ ಕಪ್ಪು ಕಂಡಿಗಳ ಎತ್ತರದ ಮೈಸೂರು ಬ್ಯಾಂಕು. ಆಕಡೆ ಈಕಡೆ ಬೆಂಗಳೂರು ವಿಶ್ವವಿದ್ಯಾಲಯದ ಕೆಂಪು ಕೆಂಪು ಕಟ್ಟಡಗಳು. ಮಹಾನಗರ ಪಾಲಿಕೆ ಗೋಡೆಗಳ ಮೇಲೆಲ್ಲಾ ಸುಂದರ ಕುಂಚ ಚಿತ್ತಾರ. ವಿಧಾನಸೌಧ ಕಡೆಯಿಂದ ಬರುವ ರಸ್ತೆಯಿಂದ ಅವೆನ್ಯೂ ರಸ್ತೆಗೆ ಹರಿಯುತ್ತಿವೆ ವಾಹನಗಳು. ಆತಂಕದಲ್ಲಿ ರಸ್ತೆ ದಾಟುತ್ತಿದ್ದಾರೆ ಜನ.
*****

ಆಗಸ್ಟ್ ೯, ೧೯೪೨, ಕ್ವಿಟ್ ಇಂಡಿಯಾ ಚಳುವಳಿ. ಗಾಂಧೀಜಿ ಸಮಗ್ರ ರಾಷ್ಟ್ರಕ್ಕೆ ಕರೆಕೊಟ್ಟಿದ್ದರು. ಗಾಂಧಿಯವರನ್ನು, ಇತರ ಮುಖಂಡರನ್ನು ಬೆಳಗ್ಗೆ ಬಂಧಿಸಿದ್ದರು. ಸುದ್ದಿ ತಿಳಿದದ್ದೇ ತಡ, ಚಿಕ್ಕಲಾಲ್ ಬಾಗ್ ನಲ್ಲಿ ಸಾರ್ವಜನಿಕ ಸಭೆ ಸೇರಿತ್ತು. ಎಚ್.ಸಿ.ಸೂರ್ಯನಾರಾಯಣ ರಾವ್, ಕೆಂಗಲ್ ಹನುಮಂತಯ್ಯ, ಎಸ್.ಡಿ.ಶಂಕರ್, ಕೆ.ರಾಮಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಬಂಧನವನ್ನು ಖಂಡಿಸಿದ್ದರು. ’ಭಾರತ ಬಿಟ್ಟು ತೊಲಗಿ’ ಕರೆಕೊಟ್ಟಿದ್ದರು. ಅದೋ ವಿಧ್ಯಾರ್ಥಿಗಳು ತರಗತಿಗಳಿಂದ ಹೊರಬಂದರು. ಸೆಂಟ್ರಲ್ ಕಾಲೇಜಲ್ಲಿ ಓದೋ ನನ್ನ ಗೆಳೆಯರ ಅಣ್ಣಂದಿರೇನೋ ಮೆರವಣಿಗೆ ಹೊರಡ್ತಾರೆ ಅಂತಾ ಗೊತ್ತಾಗಿ ನಾನೂ ದೌಡಾಯಿಸಿದೆ. ಮೈಸೂರು ಬ್ಯಾಂಕ್ ಚೌಕದಲ್ಲಿ ನಿಷೇದಾಜ್ಞೆ. ನಾವೋ ’ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಕೂಗು ಹಾಕಿಕೊಂಡು ಬರುತ್ತಾ ಇದ್ದೇವೆ. ಪೋಲೀಸರು ಬಂದರು, ದೊಣ್ಣೆ ಹಿಡಿದು ಬಡಿದರು. ಕುದುರೆ ಮೇಲಿನ ಪೋಲೀಸರು ನಮ್ಮ ಮೇಲೆ ಕುದುರೆ ದೌಡಾಯಿಸಿದಾಗ ಸತ್ತೆನೋ ಕೆಟ್ಟೆನೋ ಅಂತಾ ಓಡಲೆತ್ನಿಸಿದೆ. ಕಾಲಿಗೆ ಬಲವಾದ ಏಟು ಬಿದ್ದು ನರಳುವಂತಾಯಿತು. ಎಲ್ಲರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಒಯ್ದರು. ಕುದುರೆ ಮೇಲೆ ಪೋಲೀಸರ ನೋಡಿ, ಎಷ್ಟೋ ಕಡೆ ಅಕ್ಕಪಕ್ಕದ ರಸ್ತೆಯಲ್ಲಿದ್ದ ಹೆಂಗಸರು ಮೊರದಲ್ಲಿ ರಾಗಿ ಬೀದಿಗೆ ಎರಚಿದ್ದರು. ಕುದುರೆಗಳೂ ಜಾರಿ ಜಾರಿ ಬೀಳತೊಡಗಿದವು. ...........

********

’ಯಾದ್ ವಶೇಮ್’ ಪುಸ್ತಕದ ಗುಂಗಿನಲ್ಲಿದ್ದ ನನಗೆ ಅದರಲ್ಲಿದ್ದ ಈ ಸಾಲುಗಳು ನೆನಪಿಗೆ ಬಂದವು. ಆಗಿನ ಮೈಸೂರು ಬ್ಯಾಂಕ್ ಸರ್ಕಲ್ ಹೇಗಿತ್ತು. ಎಲ್ಲಿಂದ ಬಂದಿರಬಹುದು ಮೆರವಣಿಗೆ. ಅದರಲ್ಲಿದ್ದ ಪ್ರತಿಯೊಬ್ಬನಲ್ಲೂ ದೇಶ ಸ್ವತಂತ್ರವಾಗಬೇಕೆಂಬ ಛಲ. ’ಭಾರತ ಬಿಟ್ಟು ತೊಲಗಿ’ ಘೋಷಣೆ. ಈಚೆ ಕಡೆಯಿಂದ ಕುದುರೆ ಮೇಲೆ ಬಂದ ಬ್ರಿಟಿಷರು. ಬಡಿಯುತ್ತಿದ್ದಾರೆ ಹೋರಾಟಗಾರರನ್ನು.. ಚದುರಿದ ಮೆರವಣಿಗೆಯಿಂದ ಜನ ಕಿತ್ತೂ ಬಿದ್ದೂ ಓಡುತ್ತಿದ್ದಾರೆ. ನಾವು ನಿಂತು ನೋಡುತ್ತಿದ್ದೇವೆ. ಎಲ್ಲಾ ಅಸ್ಪಷ್ಟ. ಇನ್ನು ೧೦ ಸೆಕೆಂಡು ಬಾಕಿ. ಹಸಿರು ದೀಪ ಬೀಳುತ್ತದೆ.

Monday, September 21, 2009

ಬಿದ್ದ ಹೆಲಿಕಾಪ್ಟರ್ ಎದ್ದದ್ದು ಹೇಗೆ?

ಆಂಧ್ರದಲ್ಲಿ ಹೆಲಿಕಾಪ್ಟರ್ ಬಿದ್ದದ್ದು, ಅದರಲ್ಲಿದ್ದ ರೆಡ್ಡಿಗಾರು ಕಥೆ ಮುಗಿದದ್ದು ಎಲ್ಲಾ ಸುದ್ದಿ ಈಗ ಹಳೆಯದಾಯಿತು. ಆಗ ಹೆಲಿಕಾಪ್ಟರ್ ಬಿದ್ದದ್ದು ಹೇಗೆ ಎಂದು ಚರ್ಚೆಗಳಾದವು. ಹವಾಮಾನ, ಪೈಲಟ್ ತಪ್ಪು, ನಿರ್ವಹಣೆ ದೋಷ ಇನ್ನೂ ಏನೇನೋ ಕಾರಣಗಳಿದ್ದವು. ಇರಲಿ. ಹೆಲಿಕಾಪ್ಟರು ಹೇಗೋ ಬಿತ್ತು, ಅದು ಒ.ಕೆ. ಆದರೆ ಈ ವಿಷಯದಲ್ಲಿ ನನ್ನ ಕುತೂಹಲ ತಿರುಗಿದ್ದು ಈ ಹೆಲಿಕಾಪ್ಟರ್ ಹಾರುವುದು ಹೇಗೆ ಎಂದು! ಇದುವರೆಗೂ ಹೆಲಿಕಾಪ್ಟರ್ ಹಾರುವ ಬಗ್ಗೆ ಬರೀ ಜೆನೆರಲ್ಲಾಗಿ ಗೊತ್ತಿತ್ತು. ಆದರೆ ಟೆಕ್ನಿಕಲ್ಲಾಗಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಈ ವಿಷಯದ ಬೆನ್ನು ಬಿದ್ದು ಕೆಲ ಪುಸ್ತಕ, ವೆಬ್ ಸೈಟು ಗಳಿಂದ ಇದರ ಬಗ್ಗೆ ತಿಳಿದುಕೊಂಡೆ. ಅದರ ಫಲವೇ ಈ ಚಿಕ್ಕ ಬರಹ. ಇದರಲ್ಲಿ ತೀರಾ ತಾಂತ್ರಿಕ ವಿಷಯಗಳನ್ನು ಆದಷ್ಟು avoid ಮಾಡಿದ್ದೇನೆ.

ಹಿಂದೆ ಒಮ್ಮೆ ’ವಿಮಾನವನ್ನು ಹಾರಿಸುವುದರಲ್ಲಿ ರೆಕ್ಕೆ ಹೇಗೆ ಕೆಲಸ ಮಾಡುತ್ತದೆ ' ಎಂಬ ವಿಷಯವಾಗಿ ಬರೆದಿದ್ದೆ. ಆಗ ಇಂತದ್ದೆಲ್ಲಾ ಗೂಗಲ್ ನಲ್ಲಿ ಹುಡುಕಿದರೆ ಬೇಕಾದಷ್ಟು ಸಿಗುತ್ತದೆ. ಎಲ್ಲಿಂದಲೋ ಮಾಹಿತಿ ತಂದು (ಕದ್ದು!) ಹಾಕಿದ್ದೀಯ ಎಂದು ಗೆಳೆಯನೊಬ್ಬನಿಂದ ಟೀಕೆ ಬಂದಿತ್ತು. ಹೌದು, ವಿಜ್ಞಾನ ಜಗತ್ತಿನಲ್ಲಿ ಒಂದು ಸಾರ್ವಕಾಲಿಕ ಸತ್ಯದ ಮಾತಿದೆ. Energy can neither be created nor be destroyed , it can only be converted from one form to another ಅಂತ. ಇದನ್ನು ಮಾಹಿತಿ (information)ಗೂ ಅನ್ವಯಿಸಿಕೊಳ್ಳಬಹುದು. ಅದನ್ನು ಹೊಸತಾಗಿ ಹುಟ್ಟು ಹಾಕಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರಬಹುದಷ್ಟೆ. ತಿಳಿದುಕೊಂಡ ಮಾಹಿತಿಯನ್ನು ದಾಖಲಿಸುವ ಪ್ರಯತ್ನ ಮತ್ತು ಓದಿದವರಿಗೆ ಅರ್ಥವಾದರೆ ಆಗಲಿ ಎಂಬ ಆಶಯ . ಇದರಿಂದ ಆಸಕ್ತಿ ಬಂದು ಯಾರಾದರೂ ಇನ್ನೂ ಹೆಚ್ಚು ತಿಳಿದುಕೊಳ್ಳಲು ಹೊರಡುವುದಾದರೆ ಆಲ್ ದಿ ಬೆಸ್ಟ್ ಅಷ್ಟೆ.

ಈಗ ವಿಷಯಕ್ಕೆ ಬಂದರೆ, ಹೆಲಿಕಾಪ್ಟರ್ ಗೆ ವಿಮಾನದಷ್ಟು ಸಾಗಿಸುವ ಸಾಮರ್ಥ ಇಲ್ಲ ಅನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ಸಂದರ್ಭಗಳಲ್ಲಿ ವಿಮಾನಕ್ಕಿಂತ ಉಪಯೋಗಕಾರಿ. ಇದಕ್ಕೆ ರನ್ ವೇ ಬೇಕಿಲ್ಲ, ಇಳಿಯಲು ದೊಡ್ಡ ಜಾಗ ಬೇಕಿಲ್ಲ. ಇದು ನಿಂತ ಜಾಗದಿಂದಲೇ ಹಾಗೇ ಮೇಲೇರಬಲ್ಲುದು ಮತ್ತು ಹಾಗೇ ಇಳಿಯಬಲ್ಲುದು. ಗಾಳಿಯಲ್ಲಿ ಹಾಗೇ ನಿಲ್ಲಬಲ್ಲುದು. ಎಡ ಬಲ ಹೇಗೆ ಬೇಕಾದರೂ ತಿರುಗಬಲ್ಲುದು , ಮುಂದೆ ಹೋಗುವುದಲ್ಲದೇ ಹಿಂದೆ (reverse) ಕೂಡ ಚಲಿಸಬಲ್ಲುದು.

ಹೆಲಿಕಾಪ್ಟರ್ ಗೆ ಬೇಕಾದ್ದು ಮೂರು ರೀತಿಯ ಬಲಗಳು.

ಒಂದು, ಅದರ ಭಾರವನ್ನು ದಿಕ್ಕರಿಸಿ ಮೇಲೆರಲು ಬೇಕಾದ ಎತ್ತುವ ಬಲ.
ಎರಡನೇಯದು ಅದನ್ನು ಮುಂದಕ್ಕೆ ಹಿಂದಕ್ಕೆ ಎಡಕ್ಕೆ ಬಲಕ್ಕೆ ಚಲಿಸುವಂತೆ ಮಾಡುವ ಬಲ.
ಮೂರನೆಯದು ಅಡ್ಡವಾದ ದಿಕ್ಕಿನಲ್ಲಿ ಅದರ ಸಮತೋಲನ ಕಾಯಲು ಬೇಕಾದ ಮತ್ತೊಂದು ಬಲ.


ಹೆಲಿಕಾಪ್ಟರ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ರೋಟರ್(rotor)ಗಳಿರುತ್ತವೆ. ಒಂದು ಅದರ ತಲೆ ಮೇಲಿರುವ ದೊಡ್ಡ ರೆಕ್ಕೆಗಳ ರೋಟರ್ ಮತ್ತು ಬಾಲದಲ್ಲಿರುವ ಚಿಕ್ಕ ರೋಟರ್. ಹೆಲಿಕಾಪ್ಟರ್ ಮೇಲೇರಲು ಮತ್ತು ಮುಂದೆ ಹೋಗಲು ಬೇಕಾಗುವ ಮೇಲಿನ ಎರಡು ರೀತಿಯ ಬಲಗಳನ್ನು ಒದಗಿಸುವುದು ದೊಡ್ಡ ರೋಟರ್. ಆ ರೋಟಾರ್ ನ ರೆಕ್ಕೆಗಳು ವಾಯುಫಲಕ (airfoil) ಆಕಾರದಲ್ಲೇ ಇರುತ್ತವೆ. ಇದು ಕೆಲಸ ಮಾಡುವುದು ಬರ್ನಾಲಿ ತತ್ವದಿಂದ. (airfoil ಬಗ್ಗೆ ಈ ಮೊದಲು ನಾ ಬರೆದದ್ದನ್ನು ಇಲ್ಲಿ ಓದಿದರೆ ಅರ್ಥವಾಗಬಹುದು). ವಿಮಾನದಲ್ಲಿ ರೆಕ್ಕೆಗಳು ಸ್ಥಿರವಾಗಿದ್ದು ಇಡೀ ವಿಮಾನದ ಚಲನೆಯಿಂದ ಮಾತ್ರ ರೆಕ್ಕೆಗಳು lift ಕೊಡಲು ಸಾಧ್ಯ. ಆದರೆ ಹೆಲಿಕಾಪ್ಟರಿನಲ್ಲಿ ರೆಕ್ಕೆಗಳನ್ನು ತಿರುಗಿಸಿ ಆ lifting force ಉತ್ಪತ್ತಿ ಮಾಡುತ್ತಾರೆ. Airfoil ಆಕಾರದಲ್ಲಿರುವ ರೆಕ್ಕೆಗಳು ತಿರುಗಿದಾಗ ಅವು ಗಾಳಿಯನ್ನು ಸೀಳಿ ರೆಕ್ಕೆಯ ಕೆಳಭಾಗಕ್ಕಿಂತ ಮೇಲುಗಡೆ ಕಡಿಮೆ ಒತ್ತಡ ಉಂಟು ಮಾಡಿ ಇಡೀ ಹೆಲಿಕಾಪ್ಟರನ್ನು ಮೇಲಕ್ಕೆ ಎತ್ತುತ್ತವೆ..

ಈಗ ಬಾಲದಲ್ಲಿರುವ ಚಿಕ್ಕ ರೋಟಾರ್ ಕಡೆಗೆ ಬಂದರೆ, ಹೆಲಿಕಾಪ್ಟರಿನ ಮೇಲಿನ ದೊಡ್ಡ ರೆಕ್ಕೆಗಳು ತಿರುಗಿದಾಗ ಆ ತಿರುಗುವ ಬಲ ಎಷ್ಟು ಜೋರಾಗಿರುತ್ತದೆ ಎಂದರೆ ಅದನ್ನು ಹಾಗೇ ಬಿಟ್ಟರೆ ರೆಕ್ಕೆಗಳು ತಿರುಗುವ ಉಲ್ಟಾ ದಿಕ್ಕಿನಲ್ಲಿ ಹೆಲಿಕಾಪ್ಟರ್ ಬಾಡಿ ತಿರುಗಲು ಶುರುವಾಗಿಬಿಡುತ್ತದೆ. ಅದು torque effect. ಈ ರೀತಿ ಆಗದಂತೆ ತಡೆಯಲು ಬಾಲದ ಚಿಕ್ಕ ರೋಟರ್ ಬೇಕು. ದೊಡ್ಡ ರೆಕ್ಕೆಗಳು ತಿರುಗಲು ಶುರುವಾದ ಕೂಡಲೇ ಅದರಿಂದಲೇ ಈ ಚಿಕ್ಕ ರೆಕ್ಕೆಗಳೂ ತಿರುಗುಲು ಶುರುವಾಗುತ್ತವೆ. ಈ ಬಾಲದ ರೆಕ್ಕೆಗಳ ತಿರುಗುವಿಕೆ ತಲೆ ಮೇಲಿನ ರೆಕ್ಕೆಗಳಿಗೆ ಲಂಬವಾಗಿ ಇರುತ್ತದೆ. . ಇದು ಹೆಲಿಕಾಪ್ಟರ್ ಉಲ್ಟಾ ದಿಕ್ಕಿನಲ್ಲಿ ತಿರುಗಿ ಬೀಳದಂತೆ ವಿರುದ್ಧ ದಿಕ್ಕಿನಲ್ಲಿ ಬಲವನ್ನು ಉತ್ಪತ್ತಿ ಮಾಡಿ ಸಮತೋಲನ ಕಾಪಾಡುತ್ತದೆ. ಮೇಲಿನ ಚಿತ್ರದಲ್ಲಿ ತಿರುಗುವಿಕೆಯ ದಿಕ್ಕುಗಳನ್ನು ಗುರುತಿಸಿದೆ.

ಹೆಲಿಕಾಪ್ಟರನ್ನು ಮೇಲೆ ಹಾರಿಸಿದ್ದಾಯಿತು, ಉಲ್ಟಾ ತಿರುಗಿ ಬೀಳದಂತೆ ಹಿಡಿದುಕೊಂಡದ್ದಾಯಿತು. ಈಗ ಅದನ್ನು ಎಡಕ್ಕೆ ಬಲಕ್ಕೆ ಮುಂದಕ್ಕೆ ಹಿಂದಕ್ಕೆ ಚಲಿಸಿ ಆಮೇಲೆ ಕೆಳಕ್ಕೆ ಇಳಿಸೋಣ. Airfoil ಆಕಾರದ ರೆಕ್ಕೆಗಳು ಎತ್ತುವ ಬಲ ಉತ್ಪತ್ತಿ ಮಾಡಲು ಅವು ತಿರುಗಿದಾಗ ಅವು ಗಾಳಿಯನ್ನು ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿಯನ್ನು ಬಡಿಯುವುದು ಮುಖ್ಯ. ಇದಕ್ಕೆ angle of attack ಅನ್ನುತ್ತಾರೆ. ಈ ಕೋನ ಬದಲಾದಂತೆ ಆ ಎತ್ತುವ ಬಲ, ಎತ್ತುವ ದಿಕ್ಕು ಬದಲಾಗುತ್ತದೆ. ಹೆಲಿಕಾಪ್ಟರಿನಲ್ಲಿ ರೆಕ್ಕೆಗಳ angle of attackಅನ್ನು ಅವು ತಿರುಗುತ್ತಿದ್ದಂತೆಯೇ ಎಲ್ಲಾ ರೆಕ್ಕೆಗಳಿಗೂ ಒಟ್ಟಿಗೇ ಅಥವಾ ಒಂದೊಂದಕ್ಕೆ ಮಾತ್ರ ಬದಲಿಸಲು ಸಾಧ್ಯವಿರುವ ವ್ಯವಸ್ಥೆ ಇರುತ್ತದೆ. ಅಂದ್ರೆ rotor wing/wings can be tilted and swivelled as it spins around. ಹೆಲಿಕಾಪ್ಟರನ್ನು ಕೆಳಗಿಳಿಸಬೇಕಾದಾಗ ಎಲ್ಲ ರೆಕ್ಕೆಗಳ angle of attack ನ್ನು ಒಟ್ಟಿಗೆ ಬದಲಿಸಿದಾಗ ಅದು ಹೆಲಿಕಾಪ್ಟರನ್ನು ಕೆಳಕ್ಕೆ ತಳ್ಳುತ್ತದೆ. ಬಲಕ್ಕೆ ತಿರುಗಬೇಕು ಅಂದಾಗ ಬಲಭಾಗದಲ್ಲಿ ಬರುವ ರೆಕ್ಕೆಯ ಕೋನ ಬದಲಾಯಿಸುತ್ತಾರೆ, ಆಗ ಅಲ್ಲಿ ಒಂದು ಕಡೆ ಅಸಮತೋಲನ ಉಂಟಾಗಿ ಆ ಕಡೆಗೆ ಹೆಲಿಕಾಪ್ಟರ್ ತಿರುಗುತ್ತದೆ. ಇದೇ ರೀತಿ ಎಡಕ್ಕೆ ತಿರುಗುವಾಗ ಎಡ ಭಾಗದ ರೆಕ್ಕೆಯ ಕೋನ ಬದಲಿಸಿ ತಿರುಗಿಸುತ್ತಾರೆ. ಮುಂದೆ ಹೋಗಬೇಕಾದಾಗ ಹೆಲೆಕಾಪ್ಟರಿನ ರೆಕ್ಕೆಗಳ ಕೋನ ಯಾವ ರೀತಿ ಇರುತ್ತದೆಂದರೆ ಗಾಳಿಯು ಅದಕ್ಕೆ ಬಡಿದಾಗ ಅದು ಹೆಲಿಕಾಪ್ಟರನ್ನು ಮುಂದಕ್ಕೆ ದೂಡುತ್ತದೆ. ಅದೇ ರೀತಿ ಹಿಂದಕ್ಕೆ ಚಲಿಬೇಕಾದಾಗಲೂ ಕೂಡ. ಇದೆಲ್ಲುದರ ಹೊರತಾಗಿ ಹೆಲಿಕಾಪ್ಟರಿನ ಮೂತಿಯನ್ನು ಎಡಕ್ಕೆ ಬಲಕ್ಕೆ ಹೊರಳಿಸಲು ಬಾಲದ ರೆಕ್ಕೆಗಳ ತಿರುಗುವ ವೇಗದಲ್ಲಿ ಹೆಚ್ಚು ಕಡಿಮೆ ಮಾಡಿ ಅಸಮತೋಲನ ಉಂಟುಮಾಡುವುದರಿಂದ ಸಾಧ್ಯವಾಗುತ್ತದೆ. ಒಟ್ಟಾರೆ ಇವೆಲ್ಲಾ ಚಲನೆ, ನಿಯಂತ್ರಣಗಳ ಕಾಂಬಿನೇಷನ್ ನಲ್ಲಿ ಹೆಲಿಕಾಪ್ಟರ್ ಚಲಿಸುತ್ತದೆ.

ಹೆಲಿಕಾಪ್ಟರಿನ ಕಾರ್ಯವೈಖರಿ ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ತಾಂತ್ರಿಕವಾಗಿ ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ನಾವು ಕಾರ್ ಓಡಿಸುವಾಗ ಕ್ಲಚ್, ಗೇರ್, ಆಗ್ಸೆಲೆರೇಟರ್ ಬಳಸಿದಂತೆ ಹೆಲಿಕಾಪ್ಟರ್ ಪೈಲಟ್ ಕೆಲವು ಲೀವರ್, ಪೆಡಲ್ ಗಳ ಮೂಲಕ ಇದಿಷ್ಟನ್ನೂ ಸಾಧಿಸಬೇಕಾಗುತ್ತದೆ. ಆದ್ದರಿಂದಲೇ ಹೆಲಿಕಾಪ್ಟರನ್ನು ನೆಡೆಸಲು, ಎಲ್ಲಾ ರೀತಿಯಲ್ಲಿ ಕಂಟ್ರೋಲ್ ಮಾಡಲು ಸಿಕ್ಕಾಪಟ್ಟೆ ಪರಿಣಿತಿ ಬೇಕಾಗುತ್ತದೆ. ಇದರ ಜೊತೆಗೆ ಹೆಲಿಕಾಪ್ಟರಿನ ಎಲ್ಲಾ ಭಾಗಗಳು ಒಳ್ಳೆಯ ಸ್ಥಿತಿಯಲ್ಲಿರುವುದೂ ಮತ್ತು ಹೆಲಿಕಾಪ್ಟರ್ ಹಾರುವ, ಹಾರಿಸಲು ಸಾಧ್ಯವಾಗುವಂತಹ ವಾತಾವರಣ ಇರುವುದೂ ಮುಖ್ಯ. ಇವಿಷ್ಟರಲ್ಲಿ ಯಾವುದರಲ್ಲಿ ಸ್ವಲ್ಪ ಏರುಪೇರಾದರೂ ರೆಡ್ದಿಗಾರುಗೆ ಆದ ಸ್ಥಿತಿ ಆಗುತ್ತದೆ.

ಚಿತ್ರಗಳು: ಎಲ್ಲಿಂದಲೋ ಎತ್ತಿದ್ದು.

ಬರೆದ ಮಾಹಿತಿಗಳೇನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಲು ಬಲ್ಲವರಿಗೆ ಸ್ವಾಗತವಿದೆ. ಈ ವಿಷಯದಲ್ಲಿ ಇನ್ನಿತರ ಪೂರಕ ಮಾಹಿತಿಗಳಿಗೂ ಸ್ವಾಗತ.

Thursday, August 27, 2009

something.. for sale here !



Any comments ?!! :-)

ಹೊಸೂರು ರಸ್ತೆಗೆ ಬಿದ್ದಿದ್ದೇನೆ

ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. "life is like hosur road, there are no shortcuts!" ನಿಜ... ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ ರಸ್ತೆಯಲ್ಲಿ ಹೋಗಿ ಬಂದು ಕೆಲಸ ಮಾಡುತ್ತಾರಲ್ಲ ಎಂದು! ನಾನು ಇದುವರೆಗೂ ಕೆಲಸ ಮಾಡಿದ ಕಂಪನಿಗಳು ನಗರ ಮಿತಿಯ ಒಳಗೇ ಇದ್ದುದರಿಂದ ಓಡಾಡಲು ಅಷ್ಟೇನೂ ತೊಂದರೆಯಾಗಿರಲಿಲ್ಲ. ನಿಧಾನವಾದರೂ ತಾಸಿನೊಳಗೆ ತಲುಪುವಂತಿತ್ತು. ಆದರೆ ಈ ಹೊಸೂರು ರಸ್ತೆಗೆ ಇದೇ ಮೊದಲು ಬಂದಿರುವುದು ನಾನು. ನಾನಿರುವ ಏರಿಯಾದಿಂದ ಬಹಳ ದೂರ. ಜೊತೆಗೆ ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆಗಳೆಲ್ಲವೂ busy ರಸ್ತೆಗಳು. ಬೈಕ್ ನಲ್ಲಿ ಹೋದರೆ ತಾಸುಗಟ್ಟಲೇ ಹೋಗುತ್ತಲೇ ಇರಬೇಕು, ಹೋಗುತ್ತಾ ಹೋಗುತ್ತಾ ತಮಿಳುನಾಡಿಗೇ ಹೋಗಿಬಿಡುತ್ತೇನಾ ಅಂತ ಭಯವಾಗುತ್ತದೆ. ಸಿಟಿ ಬಸ್ಸಿನಲ್ಲಿ ಹೋದರೆ ಮಧ್ಯಾಹ್ನವಾದರೂ ತಲುಪುತ್ತೇನಾ ಇಲ್ಲವಾ ಅಥವಾ ಸಂಜೆ ವಾಪಸ್ ಹೊರಟರೆ ಮಧ್ಯರಾತ್ರಿಗಾದರೂ ಮನೆ ತಲುಪುತ್ತೇನಾ ಅಂತ ಸಂಶಯ ಶುರುವಾಗಿಬಿಡುತ್ತದೆ. ಇದು ನಗರದ ಮಿತಿಯೊಳಗೇ ಬರುವುದರಿಂದ ಕಂಪನಿಸಾರಿಗೆ ವ್ಯವಸ್ಥೆ ಇಲ್ಲ ಎಂದು ಕಂಪನಿಯವರು ಕೈಎತ್ತಿದ್ದಾರೆ. ಮೊದಲು ನನ್ನ ಸ್ನೇಹಿತರು ಕೆಲವರು ಹೊಸೂರು ರಸ್ತೆ ಟ್ರಾಫಿಕ್ ಬಗ್ಗೆ ಹೇಳುವುದನ್ನು ಕೇಳಿದಾಗ ಅಯ್ಯೋ ಪಾಪ ಅನ್ನಿಸುತ್ತಿತ್ತು. ಈಗ ನಾನೇ ಅಯ್ಯೋ ಪಾಪ ಆಗಿದ್ದೇನೆ. ಇದನ್ನೇ ಗೆಳೆಯರಿಗೆ ಹೇಳಿದರೆ ನಿನ್ನ ಕಂಪನಿ ಬಹಳ ಹತ್ತಿರವಿದೆ, ನಿನ್ನ ಪರಿಸ್ಥಿತಿ ಎಷ್ಟೋ ಪರವಾಗಿಲ್ಲ , ಇಷ್ಟಕ್ಕೇ ನೀನು ಹೀಗೆ ಅತ್ತರೆ ದಿನಾ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಇನ್ನೂ ಮುಂದೆ ಓಡಾಡುವವರ ಪಾಡು ಗೊತ್ತಾ ಅನ್ನುತ್ತಾರೆ. ಅವರು ಹೇಳುವ ಪ್ರಕಾರ ಈಗ ಹೊಸೂರು ರಸ್ತೆ ಎಷ್ಟೋ ಪರವಾಗಿಲ್ಲವಂತೆ. ಬಹಳ ಅಗಲ ಮಾಡಿದ್ದಾರಂತೆ. ಕೆಲ ಸಿಗ್ನಲ್ಲುಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಮಾತ್ರ ತೊಂದರೆ ಇದೆಯಂತೆ. ಹೌದು, ಏನೋ ರಸ್ತೆ ಕೆಲಸ ನೆಡೆಯುತ್ತಲೇ ಇದೆ. ಅದರಿಂದಲೇ ಅರ್ಧ ಟ್ರಾಫಿಕ್ ದಟ್ಟಣೆ. ಒಂದು ಫೈ ಓವರ್ ಕಟ್ಟುವಿಕೆಯೂ ನೆಡೆಯುತ್ತಿದೆ. ಅದು ಸೀದ ಇನ್ಫೋಸಿಸ್ ಒಳಗೇ ಇಳಿಯುತ್ತದಂತೆ! :) ಅದು ತಯಾರಾದ ಆದ ಮೇಲೆ ಅದರಲ್ಲಿ ಓಡಾಡಲು ಟೋಲ್ ಉಂಟಂತೆ. ಅದು ಖಾಲಿ ಹೊಡೆಯುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿದೆ. ನೋಡಬೇಕು. ಪಾಪ, ಇಂತ ರಸ್ತೆಗಳಲ್ಲಿ ದಿನವಿಡೀ ಬಸ್ ಓಡಿಸುವ ಬಿ.ಎಂ.ಟಿ.ಸಿ ಬಸ್ ಚಾಲಕರ ಶ್ರಮಕ್ಕೊಂದು ದೊಡ್ಡ ನಮಸ್ಕಾರ. peak hourನಲ್ಲಿ ಇಂಚಿಂಚಾಗಿ ಚಲಿಸುವುದಿದೆಯಲ್ಲ ಅದು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಸಂಜೆ ಎಲ್ಲರಿಗೂ ಮನೆಗೆ ಹೋಗಲು ಅದೇನೂ ಅವಸರವೋ. ಬಸ್, ಕಾರು, ಬೈಕ್ ಗಳಲ್ಲಿ ಎಲ್ಲರೂ ಹೇಗೆಗೆ ಆಗುತ್ತದೋ ಹಾಗೆಲ್ಲಾ ನುಗ್ಗುವುದನ್ನೂ ನೋಡಿಯೇ ಆನಂದಿಸಬೇಕು! ಅಲ್ಲೇ ಹತ್ತಿರದಲ್ಲಿ ಮನೆ ಮಾಡೋಣವೆಂದರೆ ನಾನಾ ತೊಡಕುಗಳು.

ದಿನಾ ೩-೪ ತಾಸು ರಸ್ತೆಯಲ್ಲಿ ಕಳೆಯುವುದಿದೆಯಲ್ಲ, ಅದರಂತಹ ಟೈಮ್ ವೇಸ್ಟು ಬೇರೆ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಎಂತವನ ಸತ್ವವನ್ನೂ, ಉತ್ಸಾಹವನ್ನೂ ಉಡುಗಿಸಿಬಿಡುತ್ತದೆ.......ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ ಒಳ್ಳೆ ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? ಗೊತ್ತಿಲ್ಲ, ಕಾದು ನೋಡಬೇಕು. :-)

Tuesday, August 04, 2009

ಗೆಳೆಯರ ಪುಸ್ತಕ ಬಿಡುಗಡೆ - ಖುಶಿ ಮತ್ತು ಕರೆಯ

ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು...... ನಮಗೂ ಖುಶಿಯಾಗಿದೆ! :-)

ಗೆಳೆಯರಾದ ಶ್ರೀನಿಧಿ.D.S ಮತ್ತು ಸುಶ್ರುತ ದೊಡ್ಡೇರಿ ಬರೆದಿರುವ ಪುಸ್ತಕಗಳು ಬಿಡುಗಡೆಯಾಗುತ್ತಿವೆ.



ಸುಚಿತ್ರಾ ಫಿಲ್ಮ್ ಸೊಸೈಟಿ ವಿಳಾಸ ಇಂತಿದೆ.
# 36, 9th Main, BV Karanth Road, II Stage,
Banashankari, Bengaluru - 560 070.

ಇದೇ ಭಾನುವಾರ ಎಲ್ಲರೂ ಅಲ್ಲಿ ಸಿಗೋಣ ಬನ್ನಿ..

Friday, July 31, 2009

ಭದ್ರಾವತಿಯೆಂದರೆ.....


ನನ್ನೂರು...
ಭದ್ರಾವತಿಯೆಂದರೆ ಬೆಂಕಿಪುರ. ಭದ್ರಾವತಿಯೆಂದರೆ ಬೆವರ ಬೇಸಿಗೆ, ಅಬ್ಬರದ ಮಳೆ, ಮಲೆನಾಡ ಜಗುಲಿ. ಭದ್ರಾವತಿಯೆಂದರೆ 'ಉಕ್ಕಿನ ನಗರಕ್ಕೆ ಸುಸ್ವಾಗತ' ಬೋರ್ಡು, ಬೈಪಾಸ್ ಪರೇಡು. ಭದ್ರಾವತಿಯೆಂದರೆ ಕಬ್ಬಿಣ, ಕಾಗದ ಕಾರ್ಖಾನೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭದ್ರಾವತಿಯೆಂದರೆ ಸುಣ್ಣದ ಹಳ್ಳಿ ಸ್ಪಟಿಕ ಭದ್ರೆ, ತ್ಯಾಜ್ಯದ ಕರಿನೀರು. ಭದ್ರಾವತಿಯೆಂದರೆ ನೆಮ್ಮದಿಯ ರೈತರ ನೀರಾವರಿ ಗದ್ದೆ, ಪಕ್ಷೇತರ ರಾಜಕೀಯ. ಭದ್ರಾವತಿಯೆಂದರೆ ಬಸ್ಟ್ಯಾಂಡು, ಮಳೆಗಾಲಕ್ಕೆ ಮುಳುಗುವ ಹೊಸ ಸೇತುವೆ, ಶತಮಾನದ ಹಳೆ ಸೇತುವೆ. ಭದ್ರಾವತಿಯೆಂದರೆ ಕೂಗುವ ಕಾರ್ಖಾನೆ ಸೈರನ್ನು, ತೆರೆದುಕೊಳ್ಳುವ ಗೇಟು, ಟ್ರಾಫಿಕ್ ತುಂಬಿದ ಡಬ್ಬಲ್ ರೋಡು ಹತ್ತೇ ನಿಮಿಷಕ್ಕೆ ಖಾಲಿ ಖಾಲಿ. ಭದ್ರಾವತಿಯೆಂದರೆ ಕಾರ್ಮಿಕ ಸಂಘ, ಚುನಾವಣೆ, ರಾಜಕೀಯ ಪ್ರವೇಶದ ಗರಡಿ ಮನೆ. ಭದ್ರಾವತಿಯೆಂದರೆ ರಣಜಿ ಸ್ಟೇಡಿಯಂ, ಎಗ್ಸಿಬಿಷನ್, ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದ ಅಯ್ಯಪ್ಪ. ಭದ್ರಾವತಿಯೆಂದರೆ ಸಿಲ್ವರ್ ಜುಬಿಲಿ ಕಾಲೇಜಿನ ಪೋಲಿ ಹುಡುಗರು, ಸಾಯಿಬಾಬಾ ಮಂದಿರದ ಅಖಂಡ ಭಜನೆ. ಭದ್ರಾವತಿಯೆಂದರೆ ಹೊಯ್ಸಳರ ನರಸಿಂಹಸ್ವಾಮಿ ದೇವಸ್ಥಾನ, ಅದರೆದುರಿನ ಮುದುಕಿಯಂಥ ತೇರು, ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ. ಭದ್ರಾವತಿಯೆಂದರೆ ಬುಲ್ಡೆಕಾಯಿ ಆಯುವ, ಸೈಕಲ್ ರೇಸಿನ ಶಾಲೆ ಮಕ್ಕಳು. ಭದ್ರಾವತಿಯೆಂದರೆ ಮಿಲಿಟರಿ ಕ್ಯಾಂಪಿನ ಗುಡಿ ಶ್ರೀನಿವಾಸನೆದುರು ಸಂಜೆ ಸೂರ್ಯನ ಕೆಂಪುಕೆನ್ನೆಯ ಮಂದಹಾಸ. ಭದ್ರಾವತಿಯೆಂದರೆ ವಿಜಯದಶಮಿ, ಕನಕಮಂಟಪದ ಅಲಂಕಾರ ದೇವರ ಎದುರಲ್ಲಿ ಬನ್ನಿಕಡಿತ. ಭದ್ರಾವತಿಯೆಂದರೆ ಬಿ.ಎಚ್. ರೋಡು, ಒಂದೇ ರೂಟಿನ ವೆಂಕಟೇಶ್ವರ ಸಿಟಿ ಬಸ್ಸು, ಲಾರಿಗಳ ರಾತ್ರಿ ರಥೋತ್ಸವ. ಭದ್ರಾವತಿಯೆಂದರೆ ಬೆಣಚು ಕಲ್ಲು, ಅದಿರು ಮಣ್ಣು, ಕಾಗೆ ಕಣ್ಣು. ಭದ್ರಾವತಿಯೆಂದರೆ ಶಿಸ್ತಿನ ಕಾಲೋನಿ, ಹಳೇನಗರದ ಸಂದಿ, ಆನೆಪಾರ್ಕು, ಜನ್ನಾಪುರದ ಜಂಗುಳಿ. ಭದ್ರಾವತಿಯೆಂದರೆ ವೆಂಕಟೇಶ್ವರ ಟಾಕೀಸಿನ ಕನ್ನಡ ಪಿಚ್ಚರು, ಮುಂಜುನಾಥ ಟಾಕೀಸಿನ ಇಂಗ್ಲೀಷ್ ಪಿಚ್ಚರು. ಭದ್ರಾವತಿಯೆಂದರೆ ಭಾನುವಾರದ ಸಂತೆ, ಸಂಜೆಗಳ ಕಂತೆ, ತಿಳಿಯದ ಚಿಂತೆ . ಭದ್ರಾವತಿಯೆಂದರೆ ಪದ್ಮನಿಲಯದ ಮಸಾಲೆದೋಸೆ, ಸರ್ಕಲ್ಲಿನ ಪಾನಿಪೂರಿ ಗಾಡಿ, ಸ್ಪೆಷಲ್ ಚುರ್ ಮುರಿ. ಭದ್ರಾವತಿಯೆಂದರೆ ಮರೆತುಹೋಗಿರುವ ಬಡಕ್ಕೆಲ ಕೃಷ್ಣಭಟ್ಟರು. ಭದ್ರಾವತಿಯೆಂದರೆ ಗೆಸ್ಟ್ ಹೌಸಿನ ನಾಗಲಿಂಗ ಹೂವಿನ ಮರ, ತಣ್ಣನೆ ಈಜು, ಹಸಿರು ಹುಲ್ಲು. ಭದ್ರಾವತಿಯೆಂದರೆ ನಾಲ್ಕು ಬಾಗಿಲುಗಳ, ಮೂರುಪಾಳಿಗಳ, ನೂರು ಪಾತಳಿಗಳ ಪೇಲವ ಕವಿತೆ. ಭದ್ರಾವತಿಯೆಂದರೆ .....

ಜಯಂತ ಕಾಯ್ಕಿಣಿಯವರ 'ಶಬ್ದತೀರ'' ಪುಸ್ತಕದ 'ಅಂಕೋಲೆಯೆಂದರೆ..' ಎಂಬ ಬರಹದಿಂದ ಪ್ರೇರಿತ.